Monday, March 2, 2020

ವೃದ್ಧಾಶ್ರಮ ೨೧

ಊರಿಗೆ ಬಂದವರೆಲ್ಲ ಒಬ್ಬೊಬ್ಬರಾಗಿ ಹಿಂತಿರುಗಿದ ನಂತರ ಮನೆ ಪುನಃ ಖಾಲಿ ಖಾಲಿಯಾಯಿತು, ರಮೇಶ ಸಹ ಅಮ್ಮನನ್ನು ಆಸ್ಪತ್ರೆ ಸೇರಿಸಿ ದಿರೇಶನಿಗೆ ಅಮ್ಮನ ಜವಾಬ್ದಾರಿ ನೀಡಿ, ಅವನ ಖರ್ಚಿಗಾಗಿ, ಅಮ್ಮನ ಆಸ್ಪತ್ರೆ ಖರ್ಚಿಗಾಗಿ ಹಾಗು  ಹುಡುಗಿಯ ಸಂಬಳ ಇದಕ್ಕೆಲ್ಲ ೩೦ ಸಾವಿರ ರೂಪಾಯಿ  ಕೊಟ್ಟು  ಮುಂಬೈ  ಬಂದು ಸಹ ಪರಿವಾರ ವಿದೇಶ ತೆರಳಿದ, ಊರಿಂದ ಬರುವ ಮುಂಚೆ ಅಮ್ಮನಿಗೆ ಸಿಕ್ಕಿದಾಗ ಅಮ್ಮ ಗೊಳೋ ಎಂದು ಅತ್ತರು, ಅವರಿಗೆ ಸಮಾಧಾನ ಹೇಳಿ ಹೇಗೋ ಆಸ್ಪತೆಯಿಂದ ಬಂದಿದ್ದ, ಮನೆಗೆ ಬಂದು ಚಿಕ್ಕಮ್ಮನವರಿಗೆ ಅಮ್ಮನ ಸ್ವಲ್ಪ ಧ್ಯಾನ ಇಡಬೇಕೆಂದು ಬೇಡಿ ಹಾಗು ಮನೆ ಮತ್ತು ಅಮ್ಮನ ಖರ್ಚಿಗೆ ಪ್ರತಿ ತಿಂಗಳು ಹಣ ಚಿಕ್ಕಮನ ಬ್ಯಾಂಕಿಗೆ ಟ್ರಾನ್ಸ್ಫರ್ ಮಾಡುತ್ತೇನೆಂದು ಸಹ ಹೇಳಿ ಬಂದಿದ್ದ.

ವಿದೇಶ ಬಂದು ರಮೇಶ ಪುನಃ ಅಲ್ಲಿಯ ಕೆಲಸ ಕಾರ್ಯದಲ್ಲಿ ನಿರತನಾದ, ಆದರೆ ಎರಡು ದಿನಕ್ಕೆ ಒಂದು ಸಾಲ ಫೋನ್ ಮಾಡಿ ಅಮ್ಮನ ಬಗ್ಗೆ ವಿಚಾರಿಸುತ್ತಿರುತ್ತಿದ್ದ. 

ಅಮ್ಮನಿಗೆ ಆಸ್ಪತ್ರೆ ಸೇರಿಸಿ ೨೦ ದಿವಸ ಆಗಿತ್ತು, ಆದರೆ ಅಷ್ಟೇನೂ ಸುಧಾರಣೆ ಕಂಡು ಬರುವುದಿಲ್ಲ, ಅದರ ಕಾರಣ  ಅಮ್ಮ ಆಸ್ಪತ್ರೆಯಲ್ಲಿ ಸ್ವಲ್ಪ ಸಹ ಸಹಯೋಗ ಮಾಡುವುದಿಲ್ಲ, ಏನೂ ಹೇಳಿದರೂ  ಕೇಳುವುದಿಲ್ಲ, ಎಲ್ಲದಕ್ಕೂ ಅವರಿಂದ ಸಾಧ್ಯವಿಲ್ಲ ಎಂದು ಹೇಳುತ್ತಾರೆ  ಎಂದು ದಿರೇಶ ತಿಳಿಸಿದ. 

ದಿರೇಶನಿಂದ ಕೆಲಸದ ಹುಡುಗಿ ಸುಮ್ಮಿಯ ಕಥೆ ಕೇಳಿ  ರಮೇಶ ಇನ್ನು ಚಿಂತಿತನಾದ, ಅವಳು ಇಡೀ ದಿನ ಮೊಬೈಲಲ್ಲಿ ಬಾಯ್ಫ್ರೆಂಡ್ ಜೊತೆ ಮಾತನಾಡುತ್ತಿದ್ದಳು ಅಂತೇ, ಅಮ್ಮನ ಚಾಕರಿ ಸಹ ಸರಿ ಮಾಡುತ್ತಿರಲಿಲ್ಲ, ಅದಕ್ಕೆ ದಿರೇಶ ಅವಳಿಗೆ ಬೈದಕ್ಕೆ ಅಮ್ಮನನ್ನು ಬಿಟ್ಟು ಹೇಳದೆ ಕೇಳದೆ ಆಸ್ಪತ್ರೆಯಿಂದ ಹೋಗಿದ್ದಳು, ಅವಳ ತಂದೆ ಮೊದಲೇ ದಿರೇಶನಿಂದ  ಸಂಬಳದಿಂದ ಹೆಚ್ಚು ಹಣ ತೆಗೆದುಕೊಂಡು ಹೋಗಿದ್ದ, ಇನ್ನು ಅವಳು ಬರುವ ಹಾಗೇನು ಇರಲಿಲ್ಲ,  ಆಸ್ಪತ್ರೆಯಿಂದ ದಿರೇಶನಿಗೆ ಫೋನ್ ಬಂದು ಅವಳು ಇಲ್ಲವೆಂಬ ವಿಷಯ  ತಿಳಿದ ನಂತರ ದಿರೇಶ ಬಂದು ಆಸ್ಪತ್ರೆಯ ಹೋಮ್ ನರ್ಸ್ ಇಟ್ಟಿದ್ದ. 

ದಿರೇಶನಿಗೂ ಕೆಲಸದಿಂದ ದಿನ ಆಸ್ಪತ್ರೆ ಬರಲು ಸಾದ್ಯವಿರಲಿಲ್ಲ ಅದಕ್ಕೆ ಇಲ್ಲಿಂದ ಡಿಸ್ಚಾರ್ಜ್ ಮಾಡುವುದೇ ಒಳ್ಳೆಯದೆಂದು ಹೇಳಿದ, ಆದರೆ ರಮೇಶನಿಗೆ ಮನೆಯಲ್ಲಿ ಇನ್ನು ಯಾರೂ ನೋಡುವುದು ಎಂಬ ಚಿಂತೆ ಶುರುವಾಯಿತು.

ರಮೇಶ ದಿರೇಶನಿಗೆ ಫೋನ್ ಮಾಡಿ ಕೇಳಿದ "ಏನು ಡಿಸ್ಚಾರ್ಜ್ ಮಾಡುತ್ತೀಯಾ"?

ದಿರೇಶ "ಅದೇ ಒಳ್ಳೆಯದು, ಇಲ್ಲಿ ಸುಮ್ಮನೆ......  ಏನೂ ಪ್ರಯೋಜನ ಕಾಣುವುದಿಲ್ಲ".

ರಮೇಶ "ಹಾಗಾದರೆ ಇನ್ನು ಅಮ್ಮನ ಚಾಕರಿಗೆ ಯಾರೂ"?

ದಿರೇಶ "ಈಗ ಇದ್ದ ಹೋಮ್ ನರ್ಸನಿಗೆ ಕೇಳಿದೆ, ಅವಳು ಜನ ಸಿಗಬಹುದು ಆದರೆ ಮನೆಗೆ ಬರಬೇಕೆಂದರೆ ತುಂಬಾ  ಹಣ ಕೇಳಬಹುದೆಂದು ಹೇಳಿದ್ದಳು"

ರಮೇಶ "ಅವಳೇ ಬರುವುದಿಲ್ಲವ"?

ದಿರೇಶ "ಇಲ್ಲ,  ಅವಳಿಗೆ ಕೇಳಿದೆ, ಅವಳು ಆಗುವುದಿಲ್ಲ ಹೇಳಿದಳು, ಇಲ್ಲೇ ಸಮೀಪ ಅವಳ ಮನೆ, ಒಂಬತ್ತು ಸಾವಿರ ಸಂಬಳ, ಅವಳ್ಯಾಕೆ ಬರುತ್ತಾಳೆ ".  

ರಮೇಶ "ಹ್ಮ್ಮ್.... ಹೋಮ್ ನರ್ಸ್ ಇಲ್ಲದೆ ಮನೆಗೆ ಕರೆದುಕೊಂಡು ಹೋಗುವ ಹಾಗೆ ಇಲ್ಲ, ಮೊದಲು ಹೋಮ್ ನರ್ಸ್ ಹುಡುಕು" ಎಂದು ಹೇಳಿದ.

ದಿರೇಶ "ಹ್ಮ್ಮ್, ಮತ್ತೆ ನೀನು ಕೊಟ್ಟ ಹಣಯೆಲ್ಲ ಮುಗಿದಿದೆ"

ರಮೇಶ ಆಶ್ಚರ್ಯದಿಂದ "ಏನು!! ೩೦ ಸಾವಿರ ಮುಗಿಯಿತಾ"?

ದಿರೇಶ ಸ್ವಲ್ಪ ಆವೇಶದಿಂದ "ಮತ್ತೇನು ಇಲ್ಲಿ ಖರ್ಚು ಎಷ್ಟಿದೆ ಗೊತ್ತುಂಟಾ ನಿನಗೆ? ಆರು ಸಾವಿರ ಸುಮ್ಮಿಯ ತಂದೆಗೆ ಕೊಟ್ಟಿದ್ದೆ, ಹತ್ತು ಸಾವಿರ ನೀನು ನನಗೆಂದು ಕೊಟ್ಟದ್ದು ಅದು ನಾನು ಹೆಂಡತಿ ಮಕ್ಕಳಿಗೆ ಕಳಿಸಿದೆ, ಬೇರೆ ಹದಿನಾಲ್ಕು ಸಾವಿರದಲ್ಲಿ ಅಮ್ಮನ ಊಟ, ಉಪಹಾರ ಬೇರೆಲ್ಲ ಖರ್ಚು".

ಇದನ್ನು ಕೇಳಿ ರಮೇಶ  ನಿಟ್ಟುಸಿರೆಳೆದ, ಅವನಿಗೆ ಗೊತ್ತಿತ್ತು ಈಗ ಹೆಚ್ಚೇನು ದಿರೇಶನಿಗೆ ಹೇಳಿದರೆ, ಹಾಗಾದರೆ ನೀನೆ ಬಂದು ಮಾಡೆಂದು ಹೇಳಬಹುದು, ಅದಕ್ಕೆ ಅವನು ಶಾಂತಿಯಿಂದ "ಓ ಕೆ, ನೀನು ಹೋಮ್ ನರ್ಸ್ ಹುಡುಕು ನಂತರ ಆಸ್ಪತ್ರೆ ಬಿಲ್ ಎಷ್ಟು ಆಗುತ್ತದೆ ನೋಡಿ ಹೇಳು"

ದಿರೇಶ "ಓ ಕೆ, ಬಿಲ್ ತುಂಬಾ ಆಗಬಹುದು, ಹುಡುಗಿ ಸಿಕ್ಕಿದ ನಂತರ ಫೋನ್ ಮಾಡುತ್ತೇನೆ"ಎಂದು ಹೇಳಿ ಫೋನ್ ಇಟ್ಟ.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ 
ಚಿತ್ರ ಕೃಪೆ :ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...