Friday, February 18, 2022

ತಾಯಿ ಮಕ್ಕಳು


Photo courtesy: Google


"ಹೇಗಿದ್ದೀರಿ ದೊಡ್ಡಕ್ಕ?" ಮಂಜಣ್ಣ ದೊಡ್ಡಕ್ಕನ ಮನೆಯೊಳಗೆ ಪ್ರವೇಶ ಮಾಡುತ ಕೇಳಿದರು.

ಒಳಗೆ ನೆಲ ಒರೆಸುತ್ತಿದ್ದ ಸುಮಾರು ೭೭ ವಯಸ್ಸಿಸ್ನ ದೊಡ್ಡಕ್ಕ "ಓ ಮಂಜು, ಬಾ ಬಾ". 

ಮಂಜಣ್ಣ"ಏನಕ್ಕ!! ಈ ವಯಸ್ಸಿನಲ್ಲಿಯೂ ನಿಮಗೆ ಇದೆಲ್ಲ ಕೆಲಸ ಮಾಡಬೇಕಾಗುತ್ತದೆ, ನಿಮಗೆ ಐದು ಮಕ್ಕಳಿದ್ದು ಏನು ಪ್ರಯೋಜನ??". 

ದೊಡ್ಡಕ್ಕ" ಬಿಡು ಮಂಜು, ಅವರೆಲ್ಲಿದರೆ ಇಲ್ಲಿ ಕೆಲಸ ಮಾಡಲಿಕ್ಕೆ, ಇಲ್ಲಿ ಇರುತ್ತಿದ್ದರೆ ನನಗೆ ಕೆಲಸ ಮಾಡಲಿಕ್ಕೆ ಬಿಡುತ್ತಾರಾ" ದೊಡ್ಡಕ್ಕ ಒಂದು ಉದಾಸೀನ ಸ್ವರದಲ್ಲಿ ಹೇಳಿದರು. 

ಮಂಜಣ್ಣ "ಸುಮ್ಮನೆ ಯಾಕೆ ನೀವು ನಿಮ್ಮ ಮಕ್ಕಳ ಪರವಾಗಿ ಮಾತನಾಡುತ್ತಿದ್ದಿರಿ, ನನಗೆ ಎಲ್ಲಾ ತಿಳಿದಿದ್ದ ವಿಷಯ, ಮೊನ್ನೆ ನಮ್ಮೂರಿನ ಉತ್ಸವಕ್ಕೂ ಯಾರೂ ಬರಲಿಲ್ಲ, ಸೀನು ಒಬ್ಬನನ್ನು ಬಿಟ್ಟು ನಿಮ್ಮ ಬೇರೆ ನಾಲ್ಕು ಮಕ್ಕಳು ಊರಿಗೆ ಬರದೆ ಇಂದಿಗೆ ನಾಲ್ಕೈದು ವರುಷ ಆಗಿರಬೇಕು, ಈ ಸಲ ಸೀನು ಸಹ ಬರಲಿಲ್ಲ".


ದೊಡ್ಡಕ್ಕ "ಇಲ್ಲ ಮಂಜು, ಸೀನುಗೆ ನಾನು ಹೇಳಲು ಮರೆತೆ ಉತ್ಸವದ ಬಗ್ಗೆ, ನನಗೆ ಫೋನ್ ಮಾಡಿ ಬೈದ, ಯಾಕೆ ನೀನು ಉತ್ಸವದ ಬಗ್ಗೆ ಹೇಳಲಿಲ್ಲ, ನಾನು ಬರುತ್ತಿದೆಯಲ್ಲವೆಂದು, ನನ್ನದ್ದೇ ತಪ್ಪಾಯಿತು, ಹೇಳಲು ಮರೆತೆ, ಮತ್ತೆ ಉಷಾ, ಲತಾ, ಮೋಹಿನಿ ಅವರಳಿಗೆಲ್ಲ ಅವರವರ ಪರಿವಾರ ಇದ್ದ ಮೇಲೆ ಎಲ್ಲಿ ಅವರಿಗೆ ಸಮಯ ಸಿಗುತ್ತದೆ ಊರಿಗೆಲ್ಲ ಬರಲಿಕ್ಕೆ, ಮತ್ತೆ ದೊಡ್ಡವ ಮಹೇಶನಿಗೆ ಅವನ ಮಕ್ಕಳು ಹಣ ಕೊಟ್ಟರೆ ಬರಬೇಕು, ಇಲ್ಲಾದರೆ ರಿಟೈರ್ಡ್ ಮನುಷ್ಯ ಎಲ್ಲಿಂದ ಹಣದ ವ್ಯವಸ್ಥೆ ಮಾಡಿ ಬರುವುದು, ಜೀವನಪೂರ್ತಿ ಅವನ ಎರಡು ಮಕ್ಕಳಿಗೋಸ್ಕರ ದುಡಿದ, ಈಗ ಪಾಪ ಅವನು ಯಾವುದಕ್ಕೂ ಅವರ ಮುಖ ನೋಡಬೇಕು".

ಮಂಜಣ್ಣ "ಆದರೆ ಅಕ್ಕ ತಾಯಿಯನ್ನು ನೋಡುವುದು ಅವರ ಕರ್ತವ್ಯ ತಾನೇ, ನೀವೊಬ್ಬರೇ ಇಲ್ಲಿ ಎಷ್ಟು ಕಷ್ಟದಿಂದ ತನ್ನ ದಿನ ಕಳೆಯುತ್ತಿದ್ದಿರಿಯೆಂದು ನಾವೆಲ್ಲಾ ನೋಡುದಿಲ್ಲವೇ, ಸ್ವಲ್ಪಾದರೂ ಜವಾಬ್ದಾರಿ ಬೇಕು ತಾನೇ". 

ದೊಡ್ಡಕ್ಕ "ಬಿಡು ಮಂಜು, ನೀವೆಲ್ಲ ನೆರೆಹೊರೆಯವರು ಇದ್ದಿರಲ್ಲ ನನ್ನ ಸಹಾಯಕ್ಕೆ, ನನಗೇನು ಕಷ್ಟ, ಬೇಕಾದಾಗ ಎಲ್ಲ ಹಣ ಕಳಿಸುತ್ತಾರೆ ಅವರೆಲ್ಲ ನನಗೆ". 

ಮಂಜಣ್ಣ "ಕೇವಲ ಹಣ ಸಾಕಾಗುತ್ತದೆಯಾ ಅಕ್ಕ, ಇನ್ನು ಈ ಮುದಿವಯಸ್ಸಿನಲ್ಲಿ ಹೇಗೆ ಸಾಧ್ಯ ಒಬ್ಬಂಟಿ ಜೀವನ ಕಳೆಯುವುದು, ನಿಮನ್ನು ನೋಡಿ ನನಗೆ ಕಣ್ಣೀರು ಬರುತ್ತದೆ, ಮಕ್ಕಳಾಗಿ ಅವರಿಗೆ ಯಾವುದೇ ಭಾವನೆ ಇಲ್ಲವೇ, ಕೇವಲ ಬಾಯಿಯಿಂದ ಅಮ್ಮ ಅಮ್ಮಯೆಂದು ಹೇಳಿದರೆ ಸಾಲದು, ಜವಾಬ್ದಾರಿ ವಯಿಸುವ ಇಚ್ಛೆ ಇರಬೇಕು".

ದೊಡ್ಡಕ್ಕ "ಫೋನ್ ಮಾಡುತ್ತಿರುತ್ತಾರೆ ಮಂಜು ಅವರು, ಮತ್ತೆ ಕಷ್ಟ ಆದರೆ ಕೆಲಸಕ್ಕೇ ಒಂದು ಜನ ಇಡುಯೆಂದು ಹೇಳುತ್ತಾರೆ, ಆದರೆ ಇಲ್ಲಿ ಕೆಲಸಕ್ಕೆ ಜನ ಎಲ್ಲಿ ಸಿಗುತ್ತಾರೆ, ಬಿಡು ಹೇಗೋ ಇಷ್ಟು ದಿನ ಜೀವನ ಸಾಗಿ ಹೋಯಿತು, ನಮ್ಮ ದೈವ ದೇವರಿದ್ದಾರೆ ನನ್ನನ್ನು ರಕ್ಷಿಸಲು".

ಮಂಜಣ್ಣ "ಹಾಗೆಲ್ಲ ಹೇಳಿದರೆ ಹೇಗೆ ಅಕ್ಕ, ಭಾವ ತೀರಿ ಹೋದ ನಂತರ ಎಷ್ಟು ಕಷ್ಟಪಟ್ಟು ನೀವು ಮಕ್ಕಳನ್ನು ಬೆಳೆಸಿದ್ದೀರಿ ಎಂದು ನನಗೆ ತಿಳಿದಿಲ್ಲವೆ, ಈಗ ನಿಮಗೆ ಅಗತ್ಯ ಇದ್ದಾಗ ಅವರು ಹೀಗೆ ಮಾಡಬಹುದೇ? ಈಗ ದೇವರ ದಯೆಯಿಂದ ಕೈಕಾಲು ಸರಿ ಇದೆ, ನಾಳೆ ಒಂದು ವೇಳೆ ಕೈಕಾಲು ಬಿದ್ದರೂ ಸಹ ಕೆಲಸಕ್ಕೆ ಜನ ನೋಡುಯೆಂದು ಹೇಳುತ್ತಾರಾ? ಉಪದೇಶ, ಸಲಹೆಗಳು ಎಲ್ಲ ಬೇಡ ಹೇಳಿ ಅವರಿಗೆ" ಎಂದು ಕೋಪದಿಂದ ಮಂಜಣ್ಣ ನುಡಿದರು.

ಮಂಜು ಹೇಳುವುದೆಲ್ಲ ಸರಿ ಎಂದು ತಿಳಿದರೂ ದೊಡ್ಡಕ್ಕ "ಬಿಡು ಮಂಜು, ನನ್ನದು ಇದ್ದದೆ, ನೀನೇಳು ಕೆಲಸ ಆಯ್ತಾ ನಿನ್ನ?".

ಮಂಜಣ್ಣ "ಇಲ್ಲ ಅಕ್ಕ ಎಲ್ಲಿ, ತೆಂಗಿನ ಕಾಯಿ ಕೊಯ್ಯಲು ಬರುತ್ತೇನೆ ಎಂದು ತೋಮ ಹೇಳಿದ್ದ, ಬೇವರ್ಸಿ ರಲೇ ಇಲ್ಲ, ಫೋನ್ ಮಾಡಿದ್ದಾರೆ ಫೋನ್ ಎತ್ತುದಿಲ್ಲ, ಇವರಿಗೆಲ್ಲ ಚರ್ಬಿ ಏರಿದೆ, ಕೇಳಿದಷ್ಟು ಹಣ ಸಿಗುತ್ತದೆಯಲ್ಲ". 

ದೊಡ್ಡಕ್ಕ "ಹೌದು ಮಂಜು, ನಮ್ಮ ಮರದಿಂದ ಸಹ ಕೊಯ್ಯಲಿಕ್ಕಿತ್ತು, ಉಷಾ ಮೊನ್ನೆ ಫೋನ್ ಮಾಡಿ ಕೇಳುತ್ತಿದ್ದಳು 'ಏನು ಈ ಸಲ ನೀನು ತೆಂಗಿನಕಾಯಿ ಕಳಿಸಲೇ ಇಲ್ಲ ಎಂದು', ಬಸ್ ದವನಿಗೆ ಹೇಳಿ ಇಟ್ಟಿದಾಳೆ ಅಂತೇ, ಆದರೆ ಈ ತೋಮನ ಭರವಸೆಯಲ್ಲಿ ಇದ್ದರಾಯಿತು". 

ಮಂಜಣ್ಣ "ಉಷಾಳಿಗೆ ಹೇಳಿ ಅಕ್ಕ, ಮುಂಬೈಯಲ್ಲಿ ತೆಂಗಿನಕಾಯಿ ಸಿಗುತ್ತದೆಯೆಂದು, ನಾಚಿಗೆ ಇಲ್ಲ ಇವರಿಗೆ, ನಿಮಗೆ ಕೋಪ ಬರಬಹುದು ಅಕ್ಕ, ಆದರೆ ಇವರಿಗೆ ಬಂದಾಗಾಯೆಲ್ಲ ಕೇವಲ ಉಪದೇಶ ಕೊಟ್ಟು, ಇಲ್ಲಿಂದ ಸಾಮಾನು ಹೊಯ್ಯುವುದಲ್ಲದೆ, ನಿಮ್ಮ ಸ್ವಲ್ಪ ಸಹ ಚಿಂತೆ ಇಲ್ಲ, ನಿಮ್ಮ ಮಕ್ಕಳಲ್ಲಿ ನಿಮ್ಮ ಒಂದು ಗುಣ ಸಹ ಇಲ್ಲ, ಬರುತ್ತೇನೆ ನಾನು" ಎಂದು ಹೇಳಿ ಕೋಪದಿಂದ ಹೊರಟರು.

ಮಂಜಣ್ಣ ಹೋದ ಮೇಲೆ ದೊಡ್ಡಕ್ಕ ಒಂದು ನಿಟ್ಟುಸಿರು ಬಿಡುತ್ತಾ ಪುನಃ ತನ್ನ ಕೆಲಸ ಮುಂದುವರಿಸಿ ಯೋಚಿಸಲಾರಂಭಿಸಿದರು "ಈ ಮಂಜುನಿಗೆ ಹೇಗೆ ಹೇಳಲಿ ಈಗೀಗ ಮಕ್ಕಳ ಫೋನ್ ಬರುವುದು ಸಹ ಕಡಿಮೆ ಆಗಿದೆಯೆಂದು, ಹಣ ಬರದೆ ವರುಷ ಆಯಿತೆಂದು, ಯಾವಾಗಲೊಮ್ಮೆ ಸೀನು ಕಳಿಸಿದ್ದಾರೆ ಕಳಿಸುತ್ತಾನೆ ಅಷ್ಠೆಯೆಂದು, ಫೋನ್ ಸಹ ಯಾವಾಗಲೊಮ್ಮೆ ಮಾಡಿದರೆ ಅವನೇ ಮಾಡುವುದೆಂದು, ಗೊತ್ತು ಬದುಕು ಈಗ ಕಷ್ಟವಾಗುತ್ತಿದೆ ನನ್ನ, ಆದರೆ ಏನು ಮಾಡುವುದು, ಯಾರಿಗೆ ಹೇಳುವುದು ನನ್ನನ್ನು ನೋಡಿಯೆಂದು, ಯಾವಾಗಲೊಮ್ಮೆ ಜ್ವರ ಬಂದರೆ ಮದ್ದು ತರಲು ನೆರೆಹೊರೆಯವರ ಮುಖ ನೋಡಬೇಕಾಗುತ್ತದೆ, ಮಕ್ಕಳಿಗೆ ಫೋನ್ ಮಾಡಿ ತಿಳಿಸಿದರೆ ಸಿಗುವುದು ಕೇವಲ ಸಲಹೆ ಹಾಗೂ ತಾತ್ಕಾಲಿಕವಾಗಿ ಸ್ವಲ್ಪ ಹಣ, ಅವರವರ ಕರ್ತವ್ಯದ ಅರಿವು ಅವರಿಗೆ ಯಾಕೆ ಇಲ್ಲ, ಇರಬೇಕಲ್ಲ? ಮಕ್ಕಳ ಮದುವೆ ಮಾಡಿದಾಗ, ಅವರ ಉನ್ನತಿ ನೋಡುತ್ತಿದ್ದಾಗ, ಅವರ ಸಂಸಾರ ಬೆಳೆಯುತ್ತಿದ್ದಾಗ ಪ್ರತಿ ಹಂತದಲ್ಲೂ ಅನಿಸುತಿತ್ತು ಈಗ ನನ್ನ ಜೀವನದ ಕಷ್ಟ ದೂರವಾಗುತ್ತದೆ ಎಂದು, ಆದರೆ ದೇವರು ಆ ದಿನ ಕರುಣಿಸಲೇ ಇಲ್ಲವಲ್ಲ" ಯೋಚಿಸುತ್ತಿರುವ ದೊಡ್ಡಕ್ಕನ ಕಣ್ಣಿನಿಂದ ಧಾರಾಳಾವಾಗಿ ಕಣ್ಣೀರು ಹರಿಯುತ್ತಿತ್ತು.

ಹೊರಗೆ ಕೊಟ್ಟಿಗೆಯಿಂದ ಬಹುಶ ಹಸಿವಿಂದ ಹಸು "ಅಂಬಾ ಅಂಬಾ" ಎಂದು ಕೂಗುತಿತ್ತು, ಆ ಹಸುವಿನ ಸ್ವರ ಕೇಳಿ ಯೋಚನೆಯಿಂದ ಹೊರ ಬಂದರು ತಾಯಿ ಎಂಬ ಮಹಾನ್  ಉದಾರ ಹೃದಯದ ಜೀವಿ ದೊಡ್ಡಕ್ಕ, ನಿಧಾನವಾಗಿ ಅವರು ಹಸುವಿನ ಕೊಟ್ಟಿಗೆಯ ಕಡೆ  ಹೆಜ್ಜೆ ಇಟ್ಟರು. 


by ಹರೀಶ್ ಶೆಟ್ಟಿ, ಶಿರ್ವ

Monday, February 14, 2022

ಸತ್ಕರ್ಮದ ಫಲ



ಕಿಕ್ಕಿರಿದು ತುಂಬಿದ ಬಸ್ಸಲ್ಲಿ ರಾಜಪ್ಪ ಹೇಗೋ ಹತ್ತಿದರು, ಬಸ್ ಹತ್ತಿದ ನಂತರ ಒಂದು ಕೈಯಿಂದ ಜೇಬಿನಿಂದ ಕರವಸ್ತ್ರ ತೆಗೆದು ಮುಖದ ಬೆವರನ್ನು ಒರೆಸುತ್ತಾ ಕಂಡಕ್ಟರ್ ಬಂದ ಕೂಡಲೇ ಚಿಲ್ಲರೆ ಹಣ ಕೊಟ್ಟು ಟಿಕೆಟ್ ಪಡೆದುಕೊಂಡರು. 

ಒಂದು ಸ್ಟಾಪ್ ಪಾಸ್ ಆದ ನಂತರ ಅವರಿಗೆ ಸೀಟ್ ಸಿಕ್ಕಿತು, ಸೀಟಲ್ಲಿ ಕೂತು "ಅಯ್ಯಪ್ಪ" ಎನ್ನುತ ಅವರು ಕಣ್ಣು ಮುಚ್ಚ್ಕೊಂಡು ಮನೆಯ ಸ್ಥಿತಿಯ ಬಗ್ಗೆ ಯೋಚಿಸಲಾರಂಭಿಸಿದರು, ಮನೆಯ ದುರಾವಸ್ಥೆಯ ದೃಶ್ಯ, ಹಾಸಿಗೆ ಹಿಡಿದ ಹೆಂಡತಿ ಭಾಗ್ಯಮ್ಮ, ವಿಧವೆ ಸೊಸೆ ಸುಮಾಳ  ದೀನಯ ಸ್ಥಿತಿ, ಹಸಿವೆಯಿಂದ ಅಳುತ್ತಿರುವ ಎರಡು ವರ್ಷದ ಮೊಮ್ಮಗ, ಮುಚ್ಚಿದ ಕಣ್ಣಿನಿಂದಲೇ ಕಣ್ಣೀರು ಹರಿದು ಬಂತು. 

ಎಲ್ಲ ಒಳ್ಳೆಯೇ ನಡೆಯುತಿತ್ತು ಜೀವನದಲ್ಲಿ, ಆದರೆ ಮುಂಬೈಯಲ್ಲಿ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರ  ಮಗ ಸುದೀಪ ಅಕಸ್ಮಾತಾಗಿ ಕಾರ್ ಅಪಘಾತದಲ್ಲಿ ತೀರಿ ಹೋದ ನಂತರ ಅವರೆಲ್ಲರ ಬದುಕು ದುಃಖದ ಸಾಗರದಲ್ಲಿ ತೇಲಿ ಹೋಯಿತು, ಆದಾಯ ಇಲ್ಲದೆ ಮನೆಯ ಸ್ಥಿತಿ ದಿನದಿಂದ ದಿನ ದಯನೀಯ ಆಗುತ್ತಾ ಹೋಯಿತು. ಸ್ವಲ್ಪ ದಿವಸ ರಾಜಪ್ಪನವರು ಅಲ್ಲಿಂದ ಇಲ್ಲಿಂದ ಹಾಗು ಇದ್ದ ಹಣದಿಂದ ಮನೆಯ ಖರ್ಚು ನಡೆಸಿದರು, ಆದರೆ ಈಗ ಸ್ಥಿತಿ ಗಂಭೀರವಾಗಿತ್ತು, ಮನೆಯಲ್ಲಿ ಅಡುಗೆ ಸಾಮಾನು ಮುಗಿದು ಉಪವಾಸ ಇರುವ ಪರಿಸ್ಥಿತಿ ಉಂಟಾಯಿತು, ಕಡೆಗೆ ರಾಜಪ್ಪನವರಿಗೆ ಇನ್ನು ಹೀಗೆಯೇ ಕೂತುಕೊಂಡರೆ ಆಗಲ್ಲ, ಏನಾದರೂ ಮಾಡಬೇಕಾಗುತ್ತದೆ ಎಂದು ಹೊರಗೆ ಹೋಗಲು ನಿರ್ಣಯಿಸಿದ್ದರು.

ವಯಸ್ಸಾದರೂ ಈಗ ಅವರ ಮೇಲೆ ಒಂದು ಜವಾಬ್ದಾರಿ ಬಂದಿತ್ತು, ಹೇಗಾದರೂ ನಿಭಾಯಿಸಬೇಕು, ಹೊರಗೆ ಪೇಟೆಗೆ ಹೋಗಲು ಬಸ್ಸಿಗೆ ಹಣ ಬೇಕು, ಆದರೆ ಸದ್ಯ ಮನೆಯಲ್ಲಿ ಅಷ್ಟು ಸಹ ಹಣ ಇರಲಿಲ್ಲ, ಮನೆಯ ಮೂಲೆ ಮೂಲೆಯಲ್ಲಿ ಹುಡುಕಿದ ನಂತರ ಅವರಿಗೆ ಸಾಯಿಬಾಬನವರ ಫೋಟೋದ ಹಿಂದೆ ಬಸ್ಸಿನ ಟಿಕೆಟಿಗೋಸ್ಕರ ಬೇಕಾಗುವಷ್ಟು ಚಿಲ್ಲರೆ ಹಣ ಸಿಕ್ಕಿತು, ಬಹುಶ ಈ ಸಲ ಮಗ ಊರಿಗೆ ಬಂದಾಗ ಕೈ ಮುಗಿಯುವಾಗ ಇಟ್ಟಿರಬೇಕು, ಸಣ್ಣ ವಯಸ್ಸಿನಿಂದಲೇ ಮಗನಿಗೆ ಸಾಯಿಬಾಬಾನ ಮೇಲೆ ಒಂದು ವಿಶೇಷ ಪ್ರೀತಿ, ತುಂಬಾ ನಂಬುತ್ತಿದ್ದ ಅವರನ್ನು, ಮನೆಯಲ್ಲಿದ್ದ ಈ ಫೋಟೋ ಸಹ ಅವನು ಶಿರ್ಡಿ ಹೋದಾಗ ತಂದದ್ದು, ಬಾಲಕನಿದ್ದಾಗ ಸುದೀಪ ಒಂದೊಂದು ಗಂಟೆ ಸಾಯಿಬಾಬಾನ ಜೊತೆ ಮಾತನಾಡುತ್ತಿದ್ದ, ರಾಜಪ್ಪನವರು ಅದಕ್ಕೆ "ಏನು ಆ ಮುದುಕನ ಜೊತೆ ಅಷ್ಟು ಮಾತನುಡುವೆ" ಎಂದು ತಮಾಷೆ ಮಾಡುತ್ತಿದ್ದರು.

ಮಗನ ನೆನಪಾಗಿ ಪುನಃ ರಾಜಪ್ಪನವರ ಕಣ್ಣು ತೇವವಾಯಿತು, ಮನೆಯಿಂದ ಹೊರ ಬೀಳುವಾಗ ಹಾಸಿಗೆಯಲ್ಲಿ ಮಲಗಿದ ಹೆಂಡತಿಯ ಕಡೆ ನೋಡಿದರು, ಹೆಂಡತಿ ಗಂಡನ ಅಸಹಾಯಕತೆ ನೋಡಿ ಕಣ್ಣೀರು ಬಿಟ್ಟಳು.

"ಪೇಟೆ, ಪೇಟೆ" ಎಂಬ ಕಂಡಕ್ಟರ್ ಸ್ವರ ಕೇಳಿ ರಾಜಪ್ಪನವರು ಯೋಚನೆಯಿಂದ ಹೊರ ಬಂದು ಬಸ್ಸಿನಿಂದ ಕೆಳಗೆ ಇಳಿದರು, ಅವರಿಗೆ ಎಲ್ಲಿಗೆ ಹೋಗುವುದು ಯಾರಿಂದ ಹಣ ಕೇಳುವುದು ಒಂದು ಗೊತ್ತಾಗುತ್ತಿರಲಿಲ್ಲ, ಸಾಮಾನು ಕೊಡುವ ಕಾಮತರ ಅಂಗಡಿಗೆ ಹೋಗಲು ಮುಜುಗುರವಾಗುತಿತ್ತು, ಮೊದಲೇ ಅವರ ಹಣ ಕೊಡಲು ಬಾಕಿಯಿತ್ತು, ಇನ್ನು ಸಾಮಾನು ಕೊಡಿ ಎಂದು ಹೇಗೆ ಹೇಳಲಿ, ಆ ಸಾಹಸ ರಾಜಪ್ಪನವರಲ್ಲಿ ಇರಲಿಲ್ಲ. ಅವರು ಪೇಟೆಯ ಸರ್ಕಲ್ ನಲ್ಲಿದ್ದ ಬೆಂಚಿನ ಮೇಲೆ ಹೋಗಿ ಕುಳಿತರು.

ಏನು ಮಾಡುವುದು ಯಾರ ಹತ್ತಿರ ಹಣ ಕೇಳುವುದು ಎಂದು ಯೋಚಿಸುವಾಗ ಒಬ್ಬ ಯುವಕ ಅವರ ಹತ್ತಿರ ಬಂದ.

"ಸರ್, ಏನು ಸರ್, ಹೀಗೆ ನಿಮ್ಮ ಪರ್ಸ್ ಬಸ್ಸಲ್ಲಿ ಬಿಟ್ಟು ಹೋಗುತ್ತಿದ್ದೀರಿ, ನಾನು ನೋಡಿದಕ್ಕೆ ಆಯಿತು, ಬೇಗನೆ ಇಳಿದು ನಿಮ್ಮ ಹಿಂದೆ ಬಂದೆ, ಬೇರೆ ಯಾರು ಆಗಿದ್ದರೆ ನಿಮ್ಮ ಪರ್ಸ್ ಹೀಗೆ ಇಲ್ಲಿ ಇಳಿದು ಕೊಡುತ್ತಿರಲಿಲ್ಲ, ಸುಮ್ಮನೆ ನನಗೆ ಇಲ್ಲಿ ಇಳಿಯಬೇಕಾಯಿತು, ಇನ್ನು ಪುನಃ ಬೇರೆ ಬಸ್ ಹತ್ತಬೇಕು, ತೆಗೆದುಕೊಳ್ಳಿ ನಿಮ್ಮ ಪರ್ಸ್" ಎಂದು ರಾಜಪ್ಪ ಮಾತಾಡುವ ಮೊದಲೇ ಆ ಯುವಕ ಅವರ ಕೈಯಲ್ಲಿ ಪರ್ಸ್ ಕೊಟ್ಟು ಹೋಗಿಯೇ ಬಿಟ್ಟ, ರಾಜಪ್ಪ ಕಕ್ಕಾಬಿಕ್ಕಿ ಅವಸ್ಥೆಯಲ್ಲಿ ಅವನು ಕೊಟ್ಟ ಪರ್ಸನ್ನು ನೋಡುತ್ತಿದ್ದರು. 

ನಡುಗುವ ಕೈಯಿಂದ ಅವರು ಪರ್ಸ್ ತೆರೆದು ನೋಡಿದ್ದರು, ಪರ್ಸಲ್ಲಿ ಚಿಕ್ಕ ಸಾಯಿಬಾಬಾನ ಫೋಟೋ ಇತ್ತು ಹಾಗು ಒಳಗೆ ೨೦೦೦ ರೂಪಾಯಿಯ ಹಲವಾರು ನೋಟುಗಳಿದ್ದವು, ನಡುಗುವ ಕೈಯಿಂದಲೇ ರಾಯರು ರೂಪಾಯಿ ಲೆಕ್ಕ ಮಾಡಿದರು, ಸುಮಾರು ೫೦ ನೋಟುಗಳಿದ್ದವು ಎರಡು ಸಾವಿರ ರೂಪಾಯಿಯ, ಪರ್ಸಲ್ಲಿ ಬೇರೆ ಯಾವುದೇ ವಸ್ತು ಇರಲಿಲ್ಲ,ಯಾರದಾಗಿರಬಹುದು ಈ ಪರ್ಸ್? ಹುಡುಗ ಸಹ ಹೋಗಿಯೇ ಬಿಟ್ಟ, ಇಷ್ಟೊಂದು ಹಣ ಯಾರದ್ದು? ಇದು ಸಾಯಿಬಾಬಾನ ಚಮತ್ಕಾರವೇ?, ಛೆ! ಛೆ! ಹಾಗೆಲ್ಲ ಏನು,  ಈ ಕಾಲದಲ್ಲಿ ಹಾಗೇನು ಸಂಭವವಿಲ್ಲ, ಏನು ಮಾಡಲಿ ಈಗ? ಪೊಲೀಸ್ ಸ್ಟೇಷನ್ ಹೋಗಿ ಕೊಡಲೇನು, ಛೆ! ಬೇಡ ಅವರು ಈ ಹಣವನ್ನು ತಿಂದು ಬಿಡಬಹುದು, ಇಲ್ಲ ಇಲ್ಲ, ಎಲ್ಲಾ ಪೊಲೀಸರು ಹಾಗೆ ಇರುವುದಿಲ್ಲ, ಒಳ್ಳೆ ಆಫೀಸರ್ ಸಹ ಇದ್ದಾರೆ, ರಾಜಪ್ಪರ ಕಣ್ಣ ಮುಂದೆ ಪುನಃ ಮನೆಯ ದೃಶ್ಯ ಓಡಲಾರಂಭಿಸಿತು, ಪುನಃ ಯೋಚನೆ ಬದಲಾಯಿತು, ಹೇಗೋ ಹಣ ಬಂದಿದೆ ಇದರಿಂದ ಕಾಮತರ ಎಲ್ಲಾ ಸಾಲ ಕೊಟ್ಟು ಉಳಿದ ಹಣದಿಂದ ಆದಾಯಗೋಸ್ಕರ ಯಾವುದೇ ಚಿಕ್ಕಪುಟ್ಟ ವ್ಯಾಪಾರ ಮಾಡಬಹುದು, ರಾಜಪ್ಪ ಗೊಂದಲದಲ್ಲಿ ಬಿದ್ದರು, ಹೌದು, ಎಲ್ಲ ಕಷ್ಟ ದೂರವಾಗುತ್ತದೆ ಎಂದು ದೀರ್ಘವಾಗಿ ಯೋಚಿಸಿ ಅವರು ಕಾಮತರ ಅಂಗಡಿಯತ್ತ ಹೆಜ್ಜೆ ಇಟ್ಟರು. ಆದರೆ ಈ ತನಕ ಯಾವುದೇ ದುಷ್ಕಾರ್ಯ ಮಾಡದ ರಾಜಪ್ಪನವರ ಮನಸ್ಸು ಇದಕ್ಕೆ ಒಪ್ಪಲಿಲ್ಲ, ಅವರ ಹೆಜ್ಜೆ ತಂತಾನೆ ಪೊಲೀಸ್ ಸ್ಟೇಷನ್ ಕಡೆಗೆ ಸಾಗಿತು.

ಪೊಲೀಸ್ ಸ್ಟೇಷನ್ ನಲ್ಲಿ ಡ್ಯೂಟಿಯಲ್ಲಿ ಇನ್ಸ್ಪೆಕ್ಟರ್ ರಾವ್ ಇದ್ದರು, ರಾಜಪ್ಪ ಅವರ ಹತ್ತಿರ ಎಲ್ಲ ವಿಷಯ ತಿಳಿಸಿ ಆ ಪರ್ಸನ್ನು ಅವರಿಗೆ ಒಪ್ಪಿಸಿದರು, ಇನ್ಸ್ಪೆಕ್ಟರ್ ರಾವ್ ರಾಜಪ್ಪನವರನ್ನು ಆಶ್ಚರ್ಯದಿಂದ ನೋಡುತ್ತಾ ಅವರ ಎಲ್ಲ ವಿವರ ಬರೆದು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು, ಬಹುಶ ಈ ಕಾಲದಲ್ಲೂ ಇಂತಹ ಮನುಷ್ಯರಿರುತ್ತಾರಾ ಎಂದು ಯೋಚಿಸುತ್ತಿರಬೇಕು.

ಎಲ್ಲಾ ಪ್ರಕ್ರಿಯೆ ಮುಗಿದ ನಂತರ ರಾಜಪ್ಪ ಪೊಲೀಸ್ ಸ್ಟೇಷನ್ ನಿಂದ ಹೊರಗೆ ಬಂದರು. 

ಸ್ವಲ್ಪ ಹೊತ್ತು ಪುನಃ ಸರ್ಕಲ್ಲಿನ ಆ ಬೆಂಚಿನಲ್ಲಿ ಕುಳಿತು ಯೋಚಿಸುತ ಅವರು ನೇರ ಕಾಮತರ ಅಂಗಡಿಗೆ ಹೋದರು. 

ಹಿಂಜರಿಯುತ್ತಲೇ ರಾಜಪ್ಪ ಕಾಮತರಿಗೆ ಮನೆಗೆ ಸ್ವಲ್ಪ ಸಾಮಾನು ಬೇಕೆಂದು ಕೇಳಿದರು, ಕಾಮತರು ಕನ್ನಡಕ ಕೆಳಗೆ ಮಾಡಿ ಅವರನ್ನು ನೋಡುತ್ತಾ " ರಾಯರೇ ಮೊದಲೇ ಇಪ್ಪತ್ತೆರಡು ಸಾವಿರ ಬಾಕಿಯಿದೆ"

ರಾಜಪ್ಪ" ಈ  ಒಂದು ಸಲ ಕೊಡಿ, ಮುಂದಿನ ವಾರ ಹಣದ ವ್ಯವಸ್ಥೆ ಮಾಡಿ ಎಲ್ಲ ಹಣ ಕೊಟ್ಟು ಬಿಡುತ್ತೇನೆ ಕಾಮತರೇ".

ಹಳೆ ವ್ಯಾವರಿಕ ಸಂಬಂಧ ಹಾಗು ರಾಜಪ್ಪನ ಮನೆಯ ಎಲ್ಲ ವಿಷಯ ತಿಳಿದ ಕಾಮತರು ತನ್ನ ಹುಡುಗನನ್ನು ಕರೆದು "ಮಂಜು, ರಾಯರ ಸಾಮಾನು ಬರೆದು ಎಲ್ಲ ಸಾಮಾನು ಅವರ ಮನೆಗೆ ಕೊಟ್ಟು ಬಾ" ಹಾಗು ಕಾಮತರು ರಾಜಪ್ಪನವರಿಗೆ "ರಾಯರೇ ಅಲ್ಲಿ ಹೋಗಿ ಲಿಸ್ಟ್ ಬರೆಸಿ, ಸ್ವಲ್ಪ ಹೊತ್ತಿನಲ್ಲಿ ನಿಮ್ಮ ಸಾಮಾನು ಮನೆಗೆ ತಲುಪಿಸುತ್ತೇನೆ".

ನಿಟ್ಟುಸಿರು ಬಿಡುತ್ತಾ ರಾಜಪ್ಪನವರು ಕಾಮತರಿಗೆ ಧನ್ಯವಾದ ಸಲ್ಲಿಸಿ ಹಾಗು ಸಾಮಾನು ಬರೆಸಿ ಮನೆಗೆ ಹೋಗಲು ಬಸ್ ಸ್ಥಾನದತ್ತ ಹೆಜ್ಜೆ ಇಟ್ಟರು.

ರಾಜಪ್ಪನವರು ಮನೆಗೆ ತಲುಪಿದಾಗ ಮನೆಯಲ್ಲಿ ಒಬ್ಬ ಯುವಕ ಕುಳಿತಿದ್ದ, ರಾಜಪ್ಪನವರು ಅವನನ್ನು ಆಶ್ಚರ್ಯದಿಂದ ನೋಡುತ್ತಿದ್ದಾಗ, ಅವರ ಸೊಸೆ "ಅಪ್ಪ, ಇವರು ಮುಂಬೈಯಿಂದ ಬಂದಿದ್ದಾರೆ, ಏನೋ ಇನ್ಶೂರೆನ್ಸ್ ಬಗ್ಗೆ ಹೇಳುತ್ತಿದ್ದಾರೆ". 

ಆಗ ಆ ಯುವಕ "ನಮಸ್ಕಾರ ಸರ್, ನನ್ನ ಹೆಸರು ವಿಶ್ವಾಸ, ಮುಂಬೈಯಿಂದ ಬಂದಿದ್ದೇನೆ, ನಾನೊಬ್ಬ ಇನ್ಶೂರೆನ್ಸ್ ಏಜೆಂಟ್, ಕಳೆದ ವಾರ ನಿಮ್ಮ ಮಗ ಸುದೀಪನ ಕಂಪನಿಗೆ ಹೋಗಿದ್ದೆ, ಆಗ ಅವನ ವಿಷಯ ಕೇಳಿ ತುಂಬಾ ಬೇಜಾರಾಯಿತು, ನಾವು ಒಳ್ಳೆ ಸ್ನೇಹಿತರಾಗಿದ್ದೆವು, ಅವನ ವಿಷಯ ಕೇಳಿ ನನಗೆ ತುಂಬಾ ಆಘಾತವಾಯಿತು. ಸರ್ ಮುಂಬೈಯಲ್ಲಿದ್ದಾಗ ಸುದೀಪ ನನ್ನ ಒತ್ತಾಯದ ಮೇರೆಗೆ ನನ್ನಿಂದ ಎರಡು ಇನ್ಶೂರೆನ್ಸ್ ಪಾಲಿಸಿ ಮಾಡಿಸಿದ್ದ ಹಾಗು ನಾಮಿನಿ ಆಗಿ ಒಂದರಲ್ಲಿ ಅವನ ತಾಯಿಯ ಹಾಗು ಇನ್ನೊಂದರಲ್ಲಿ ಅವನ ಪತ್ನಿಯ ಹೆಸರು ಬರೆಸಿದ್ದ, ಸರ್ ನಿಮಗೆ ಈ ಇನ್ಶೂರೆನ್ಸ್ ನ ವಿಷಯ ಗೊತ್ತಿರಲಿಕ್ಕೆ ಇಲ್ಲ ಹಾಗು ನಿಮಗೆ ತಿಳಿಸುವುದು ನನ್ನ ಕರ್ತವ್ಯ ಎಂದು ಭಾವಿಸಿ ನಾನು ಕೂಡಲೇ ಇಲ್ಲಿಗೆ ಬಂದೆ, ಸರ್ ಐದು ಐದು ಲಕ್ಷದ ಎರಡು ಪಾಲಿಸಿ ಮಾಡಿಸಿದ್ದ ಅವನು, ಅದರ ಕ್ಲೇಮ್ ಪೇಪರ್ ತಂದಿದ್ದೇನೆ, ಈ ಕ್ಲೇಮ್ ಪೇಪರಲ್ಲಿ ಬರೆಯಲು ಅಮ್ಮನ ಹಾಗು ಅವನ ಪತ್ನಿಯ ಬ್ಯಾಂಕ್ ಡೀಟೇಲ್ಸ್ ಬೇಕು ಹಾಗು ಅವರ ಸಹಿ ಬೇಕು, ಒಂದು ೧೫ ದಿವಸದಲ್ಲಿ ಅವರ ಅಕೌಂಟಿಗೆ ಐದು ಐದು ಲಕ್ಷ ಅಮೌಂಟ್ ಟ್ರಾನ್ಸ್ಫರ್ ಆಗುತ್ತದೆ" ಎಂದು ಹೇಳಿ ರಾಜಪ್ಪನವರಿಗೆ ಕ್ಲೇಮ್ ಪೇಪರ್ ಕೊಟ್ಟ.

ರಾಜಪ್ಪನವರು ಅವನ ಮಾತು ಕೇಳಿ ಆಶ್ಚರ್ಯ ಹರುಷದಿಂದ ಅವನನ್ನು ತಬ್ಬಿಕೊಂಡರು "ಮಗ ನಿನಗೆ ತಿಳಿದಿಲ್ಲ ನೀನಿಂದು ದೇವಧೂತನಾಗಿ ನಮ್ಮ ಈ ಮನೆಗೆ ಬಂದಿದೆಯೆಂದು, ಹೇಗೆ ನಿನಗೆ ಹೇಳಲಿ, ನಮ್ಮಲ್ಲಿ ಬಂದಿದ ನಿನಗೆ ಒಂದು ಚಹಾ ಮಾಡಿ ಕುಡಿಸಲೆಂದರೆ ಮನೆಯಲ್ಲಿ ಈಗ ಸಾಮಾನು ಇಲ್ಲ, ಹೇಳಲು ಬೇಸರವಾಗುತ್ತಿದೆ, ನಮ್ಮನ್ನು ಕ್ಷಮಿಸು ಮಗ".

ಅದಕ್ಕೆ ವಿಶ್ವಾಸ "ಅದರ ಏನು ಅಗತ್ಯವಿಲ್ಲ ಅಂಕಲ್, ಅದೆಲ್ಲ ಬಿಡಿ, ಒಂದು ವಿಷಯ ಹೇಳಲು ಮರೆತೆ, ನಾನು ಅವನಿಂದ ಅಡ್ವಾನ್ಸ್ ಆಗಿ ಇಪ್ಪತ್ತು ಸಾವಿರ ರೂಪಾಯಿ ಕಂತು ತುಂಬಿಸಲು ತೆಗೆದುಕೊಂಡಿದ್ದೆ, ಆದರೆ ಡ್ಯುಡೇಟ್ ಬರುವ ಮುಂಚೆನೇ ಈ ದುರಂತ ನಡೆದು ಹೋಯಿತು, ಇನ್ನು ಆ ಕಂತು ತುಂಬಿಸುವ ಅಗತ್ಯವಿಲ್ಲ" ಎಂದು ತನ್ನ ಬ್ಯಾಗಿನಿಂದ ಇಪ್ಪತ್ತು ಸಾವಿರ ತೆಗೆದು ರಾಜಪ್ಪನ ಕೈಯಲ್ಲಿಟ್ಟ"

ರಾಜಪ್ಪನವರು "ಮಗ, ನಿನಗೆ ಹೇಗೆ ಧನ್ಯವಾದ ಸಲ್ಲಿಸಲಿಯೆಂದು ಅರ್ಥವಾಗುತ್ತಿಲ್ಲ".

"ಅದೇನು ಬೇಡ ಅಂಕಲ್, ನಾನೂ ನಿಮ್ಮ ಮಗನ ಹಾಗೆಯೇ" ಎಂದು ಹೇಳಿ ರಾಜಪ್ಪನವರಿಂದ ಭಾಗ್ಯಮ್ಮ ಮತ್ತು ಸುಮಳ ಬ್ಯಾಂಕ್ ಡೀಟೇಲ್ಸ್ ಬರೆಸಿ, ಸಹಿ ಮಾಡಿಸಿ, ಅವರ ಆಶೀರ್ವಾದ ಪಡೆದು ವಿಶ್ವಾಸ ಮನೆಯಿಂದ ತೆರಳಿದ.

ರಾಜಪ್ಪ, ಭಾಗ್ಯಮ್ಮ ಹಾಗು ಸುಮಳ ಕಣ್ಣಿಂದ ಕಣ್ಣೀರು ಹರಿಯುತ್ತಿತ್ತು.

ರಾಜಪ್ಪ ಮನೆಯಲ್ಲಿದ್ದ ಮಂದಹಾಸ ಬೀರುತ್ತಿರುವ ಸಾಯಿಬಾಬಾನ ಫೋಟೋದ ಹತ್ತಿರ ಹೋಗಿ ಅಡ್ಡ ಬಿದ್ದರು.

by ಹರೀಶ್ ಶೆಟ್ಟಿ, ಶಿರ್ವ


Thursday, February 10, 2022

ನೈತಿಕತೆ

 


ರಘು ಆ ಮಸೀದಿ, ದೇವಾಲಯದ ಬದಿಯಲ್ಲಿ ಹೂ ಹಾರದ ಅಂಗಡಿ ಇಟ್ಟ್ಕೊಂಡಿದ್ದ, ಅವನ ಪಕ್ಕದಲ್ಲಿಯೇ ನಫೀಸಾ ಮತ್ತು ರಾಜು ಇಬ್ಬರು ಭಿಕ್ಷೆ ಬೇಡಲು ಕುಳಿತುಕೊಳ್ಳುತ್ತಿದ್ದರು.

ಈ ಕಡೆ ದೇವಾಲಯ ಆ ಕಡೆ ಮಸೀದಿ, ಒಳ್ಳೆ ಭಿಕ್ಷೆ ಸಿಗುತ್ತಿತ್ತು ಅವರಿಗೆ, ಆದರೆ ಎರಡು ದಿನದಿಂದ ಅವರು ಭಿಕ್ಷೆ ಬೇಡಲು ಬರಲೇ ಇಲ್ಲ, ಅವರು ಕುಳಿತುಕೊಳ್ಳುವ ಜಾಗ ಖಾಲಿ ಇತ್ತು. 

ರಘುಗೆ ಇದು ಸ್ವಲ್ಪ ಆಶ್ಚರ್ಯವೆನಿಸಿತು, ಒಂದು ದಿವಸ ಸಹ ತಪ್ಪದೆ ಬರುವ ಇವರಿಬ್ವರು ಎಲ್ಲಿಗೆ ಹೋಗಿರಬಹುದೆಂದು. 

ಆಗ ಅವನು ಎದುರಿನಿಂದ ರಾಜು ಬರುವುದನ್ನು ನೋಡಿದ, ಅವನ ಕೈಯಲ್ಲಿ ಕೇಸರಿ ಶಾಲು ಇತ್ತು, ರಘು ಅವನಿಗೆ ಕೇಳಬೇಕೆಂದಾಗ, ಅವನು ನಫೀಸಾ ಸಹ ಬರುವುದನ್ನು ಕಂಡ, ಇಬ್ಬರು ಅವರ ಜಾಗಕ್ಕೆ ಬಂದಾಗ "ಏನು ರಾಜು, ನಫೀಸಾ ಎಲ್ಲಿಗೆ ಹೋಗಿದ್ದಿರಿ ಎರಡು ದಿವಸ?". 

ಅದಕ್ಕೆ ರಾಜು "ಐದಾರೂ ಜನ ಬಂದಿದ್ದರು ಅಣ್ಣ, ಹಣದ ಆಸೆ ಕೊಟ್ಟರು ನನಗೆ, ಸ್ವಲ್ಪ ಹಣದ ಆಸೆಗೆ ಅವರು ಕೊಟ್ಟ ಈ ಕೇಸರಿ ಶಾಲು ಧರಿಸಿದ್ದೆ, ಕುತ್ತಿಗೆ ಬಿಗಿದಂತಾಯಿತು ಅಲ್ಲಿಯ ಸ್ಥಿತಿ ನೋಡಿ, ವಾಪಸ್ ಬಂದೆ, ಬೇಡ ಇದೆಲ್ಲ, ನಾನು ಸರಿ, ನನಗಿಲ್ಲಿ ಸಿಗುವ ಭಿಕ್ಷೆ ಸಾಕೆನಿಸಿತು." ಎಂದು ರಾಜು ಆ ಕೇಸರಿ ಶಾಲು ಬದಿಗಿಟ್ಟ. 

ರಘು " ನಫೀಸಾ ನೀನು?" ನಫೀಸಾ "ಅಣ್ಣ, ನನಗೂ ಅವರು ಬುರ್ಖಾ, ಹಿಜಾಬ್ ಕೊಟ್ಟಿದ್ದರು, ಅದನ್ನು ಧರಿಸಿ ಯಾಕೋ ಉಸಿರು ಕಟ್ಟಿದಂತಾಯಿತು ಪರಸ್ಪರ ನಮ್ಮವರ ಮಧ್ಯದಲ್ಲೇ ಜಗಳ ನೋಡಿ, ವಾಪಸ್ ಬಂದೆ, ಅಂತಹ ಹಣ ಬೇಡ, ಇಲ್ಲಿ ಸಿಗುವ ಭಿಕ್ಷೆಯೆ ಒಳಿತೆನಿಸಿತು". 

ಅವರ ಮಾತು ಕೇಳಿ ರಘು ಒಂದು ಉಸಿರೆಳೆದು ಆಕಾಶದತ್ತ ನೋಡಿದ. 


by ಹರೀಶ್ ಶೆಟ್ಟಿ, ಶಿರ್ವ


ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...