Monday, February 14, 2022

ಸತ್ಕರ್ಮದ ಫಲ



ಕಿಕ್ಕಿರಿದು ತುಂಬಿದ ಬಸ್ಸಲ್ಲಿ ರಾಜಪ್ಪ ಹೇಗೋ ಹತ್ತಿದರು, ಬಸ್ ಹತ್ತಿದ ನಂತರ ಒಂದು ಕೈಯಿಂದ ಜೇಬಿನಿಂದ ಕರವಸ್ತ್ರ ತೆಗೆದು ಮುಖದ ಬೆವರನ್ನು ಒರೆಸುತ್ತಾ ಕಂಡಕ್ಟರ್ ಬಂದ ಕೂಡಲೇ ಚಿಲ್ಲರೆ ಹಣ ಕೊಟ್ಟು ಟಿಕೆಟ್ ಪಡೆದುಕೊಂಡರು. 

ಒಂದು ಸ್ಟಾಪ್ ಪಾಸ್ ಆದ ನಂತರ ಅವರಿಗೆ ಸೀಟ್ ಸಿಕ್ಕಿತು, ಸೀಟಲ್ಲಿ ಕೂತು "ಅಯ್ಯಪ್ಪ" ಎನ್ನುತ ಅವರು ಕಣ್ಣು ಮುಚ್ಚ್ಕೊಂಡು ಮನೆಯ ಸ್ಥಿತಿಯ ಬಗ್ಗೆ ಯೋಚಿಸಲಾರಂಭಿಸಿದರು, ಮನೆಯ ದುರಾವಸ್ಥೆಯ ದೃಶ್ಯ, ಹಾಸಿಗೆ ಹಿಡಿದ ಹೆಂಡತಿ ಭಾಗ್ಯಮ್ಮ, ವಿಧವೆ ಸೊಸೆ ಸುಮಾಳ  ದೀನಯ ಸ್ಥಿತಿ, ಹಸಿವೆಯಿಂದ ಅಳುತ್ತಿರುವ ಎರಡು ವರ್ಷದ ಮೊಮ್ಮಗ, ಮುಚ್ಚಿದ ಕಣ್ಣಿನಿಂದಲೇ ಕಣ್ಣೀರು ಹರಿದು ಬಂತು. 

ಎಲ್ಲ ಒಳ್ಳೆಯೇ ನಡೆಯುತಿತ್ತು ಜೀವನದಲ್ಲಿ, ಆದರೆ ಮುಂಬೈಯಲ್ಲಿ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರ  ಮಗ ಸುದೀಪ ಅಕಸ್ಮಾತಾಗಿ ಕಾರ್ ಅಪಘಾತದಲ್ಲಿ ತೀರಿ ಹೋದ ನಂತರ ಅವರೆಲ್ಲರ ಬದುಕು ದುಃಖದ ಸಾಗರದಲ್ಲಿ ತೇಲಿ ಹೋಯಿತು, ಆದಾಯ ಇಲ್ಲದೆ ಮನೆಯ ಸ್ಥಿತಿ ದಿನದಿಂದ ದಿನ ದಯನೀಯ ಆಗುತ್ತಾ ಹೋಯಿತು. ಸ್ವಲ್ಪ ದಿವಸ ರಾಜಪ್ಪನವರು ಅಲ್ಲಿಂದ ಇಲ್ಲಿಂದ ಹಾಗು ಇದ್ದ ಹಣದಿಂದ ಮನೆಯ ಖರ್ಚು ನಡೆಸಿದರು, ಆದರೆ ಈಗ ಸ್ಥಿತಿ ಗಂಭೀರವಾಗಿತ್ತು, ಮನೆಯಲ್ಲಿ ಅಡುಗೆ ಸಾಮಾನು ಮುಗಿದು ಉಪವಾಸ ಇರುವ ಪರಿಸ್ಥಿತಿ ಉಂಟಾಯಿತು, ಕಡೆಗೆ ರಾಜಪ್ಪನವರಿಗೆ ಇನ್ನು ಹೀಗೆಯೇ ಕೂತುಕೊಂಡರೆ ಆಗಲ್ಲ, ಏನಾದರೂ ಮಾಡಬೇಕಾಗುತ್ತದೆ ಎಂದು ಹೊರಗೆ ಹೋಗಲು ನಿರ್ಣಯಿಸಿದ್ದರು.

ವಯಸ್ಸಾದರೂ ಈಗ ಅವರ ಮೇಲೆ ಒಂದು ಜವಾಬ್ದಾರಿ ಬಂದಿತ್ತು, ಹೇಗಾದರೂ ನಿಭಾಯಿಸಬೇಕು, ಹೊರಗೆ ಪೇಟೆಗೆ ಹೋಗಲು ಬಸ್ಸಿಗೆ ಹಣ ಬೇಕು, ಆದರೆ ಸದ್ಯ ಮನೆಯಲ್ಲಿ ಅಷ್ಟು ಸಹ ಹಣ ಇರಲಿಲ್ಲ, ಮನೆಯ ಮೂಲೆ ಮೂಲೆಯಲ್ಲಿ ಹುಡುಕಿದ ನಂತರ ಅವರಿಗೆ ಸಾಯಿಬಾಬನವರ ಫೋಟೋದ ಹಿಂದೆ ಬಸ್ಸಿನ ಟಿಕೆಟಿಗೋಸ್ಕರ ಬೇಕಾಗುವಷ್ಟು ಚಿಲ್ಲರೆ ಹಣ ಸಿಕ್ಕಿತು, ಬಹುಶ ಈ ಸಲ ಮಗ ಊರಿಗೆ ಬಂದಾಗ ಕೈ ಮುಗಿಯುವಾಗ ಇಟ್ಟಿರಬೇಕು, ಸಣ್ಣ ವಯಸ್ಸಿನಿಂದಲೇ ಮಗನಿಗೆ ಸಾಯಿಬಾಬಾನ ಮೇಲೆ ಒಂದು ವಿಶೇಷ ಪ್ರೀತಿ, ತುಂಬಾ ನಂಬುತ್ತಿದ್ದ ಅವರನ್ನು, ಮನೆಯಲ್ಲಿದ್ದ ಈ ಫೋಟೋ ಸಹ ಅವನು ಶಿರ್ಡಿ ಹೋದಾಗ ತಂದದ್ದು, ಬಾಲಕನಿದ್ದಾಗ ಸುದೀಪ ಒಂದೊಂದು ಗಂಟೆ ಸಾಯಿಬಾಬಾನ ಜೊತೆ ಮಾತನಾಡುತ್ತಿದ್ದ, ರಾಜಪ್ಪನವರು ಅದಕ್ಕೆ "ಏನು ಆ ಮುದುಕನ ಜೊತೆ ಅಷ್ಟು ಮಾತನುಡುವೆ" ಎಂದು ತಮಾಷೆ ಮಾಡುತ್ತಿದ್ದರು.

ಮಗನ ನೆನಪಾಗಿ ಪುನಃ ರಾಜಪ್ಪನವರ ಕಣ್ಣು ತೇವವಾಯಿತು, ಮನೆಯಿಂದ ಹೊರ ಬೀಳುವಾಗ ಹಾಸಿಗೆಯಲ್ಲಿ ಮಲಗಿದ ಹೆಂಡತಿಯ ಕಡೆ ನೋಡಿದರು, ಹೆಂಡತಿ ಗಂಡನ ಅಸಹಾಯಕತೆ ನೋಡಿ ಕಣ್ಣೀರು ಬಿಟ್ಟಳು.

"ಪೇಟೆ, ಪೇಟೆ" ಎಂಬ ಕಂಡಕ್ಟರ್ ಸ್ವರ ಕೇಳಿ ರಾಜಪ್ಪನವರು ಯೋಚನೆಯಿಂದ ಹೊರ ಬಂದು ಬಸ್ಸಿನಿಂದ ಕೆಳಗೆ ಇಳಿದರು, ಅವರಿಗೆ ಎಲ್ಲಿಗೆ ಹೋಗುವುದು ಯಾರಿಂದ ಹಣ ಕೇಳುವುದು ಒಂದು ಗೊತ್ತಾಗುತ್ತಿರಲಿಲ್ಲ, ಸಾಮಾನು ಕೊಡುವ ಕಾಮತರ ಅಂಗಡಿಗೆ ಹೋಗಲು ಮುಜುಗುರವಾಗುತಿತ್ತು, ಮೊದಲೇ ಅವರ ಹಣ ಕೊಡಲು ಬಾಕಿಯಿತ್ತು, ಇನ್ನು ಸಾಮಾನು ಕೊಡಿ ಎಂದು ಹೇಗೆ ಹೇಳಲಿ, ಆ ಸಾಹಸ ರಾಜಪ್ಪನವರಲ್ಲಿ ಇರಲಿಲ್ಲ. ಅವರು ಪೇಟೆಯ ಸರ್ಕಲ್ ನಲ್ಲಿದ್ದ ಬೆಂಚಿನ ಮೇಲೆ ಹೋಗಿ ಕುಳಿತರು.

ಏನು ಮಾಡುವುದು ಯಾರ ಹತ್ತಿರ ಹಣ ಕೇಳುವುದು ಎಂದು ಯೋಚಿಸುವಾಗ ಒಬ್ಬ ಯುವಕ ಅವರ ಹತ್ತಿರ ಬಂದ.

"ಸರ್, ಏನು ಸರ್, ಹೀಗೆ ನಿಮ್ಮ ಪರ್ಸ್ ಬಸ್ಸಲ್ಲಿ ಬಿಟ್ಟು ಹೋಗುತ್ತಿದ್ದೀರಿ, ನಾನು ನೋಡಿದಕ್ಕೆ ಆಯಿತು, ಬೇಗನೆ ಇಳಿದು ನಿಮ್ಮ ಹಿಂದೆ ಬಂದೆ, ಬೇರೆ ಯಾರು ಆಗಿದ್ದರೆ ನಿಮ್ಮ ಪರ್ಸ್ ಹೀಗೆ ಇಲ್ಲಿ ಇಳಿದು ಕೊಡುತ್ತಿರಲಿಲ್ಲ, ಸುಮ್ಮನೆ ನನಗೆ ಇಲ್ಲಿ ಇಳಿಯಬೇಕಾಯಿತು, ಇನ್ನು ಪುನಃ ಬೇರೆ ಬಸ್ ಹತ್ತಬೇಕು, ತೆಗೆದುಕೊಳ್ಳಿ ನಿಮ್ಮ ಪರ್ಸ್" ಎಂದು ರಾಜಪ್ಪ ಮಾತಾಡುವ ಮೊದಲೇ ಆ ಯುವಕ ಅವರ ಕೈಯಲ್ಲಿ ಪರ್ಸ್ ಕೊಟ್ಟು ಹೋಗಿಯೇ ಬಿಟ್ಟ, ರಾಜಪ್ಪ ಕಕ್ಕಾಬಿಕ್ಕಿ ಅವಸ್ಥೆಯಲ್ಲಿ ಅವನು ಕೊಟ್ಟ ಪರ್ಸನ್ನು ನೋಡುತ್ತಿದ್ದರು. 

ನಡುಗುವ ಕೈಯಿಂದ ಅವರು ಪರ್ಸ್ ತೆರೆದು ನೋಡಿದ್ದರು, ಪರ್ಸಲ್ಲಿ ಚಿಕ್ಕ ಸಾಯಿಬಾಬಾನ ಫೋಟೋ ಇತ್ತು ಹಾಗು ಒಳಗೆ ೨೦೦೦ ರೂಪಾಯಿಯ ಹಲವಾರು ನೋಟುಗಳಿದ್ದವು, ನಡುಗುವ ಕೈಯಿಂದಲೇ ರಾಯರು ರೂಪಾಯಿ ಲೆಕ್ಕ ಮಾಡಿದರು, ಸುಮಾರು ೫೦ ನೋಟುಗಳಿದ್ದವು ಎರಡು ಸಾವಿರ ರೂಪಾಯಿಯ, ಪರ್ಸಲ್ಲಿ ಬೇರೆ ಯಾವುದೇ ವಸ್ತು ಇರಲಿಲ್ಲ,ಯಾರದಾಗಿರಬಹುದು ಈ ಪರ್ಸ್? ಹುಡುಗ ಸಹ ಹೋಗಿಯೇ ಬಿಟ್ಟ, ಇಷ್ಟೊಂದು ಹಣ ಯಾರದ್ದು? ಇದು ಸಾಯಿಬಾಬಾನ ಚಮತ್ಕಾರವೇ?, ಛೆ! ಛೆ! ಹಾಗೆಲ್ಲ ಏನು,  ಈ ಕಾಲದಲ್ಲಿ ಹಾಗೇನು ಸಂಭವವಿಲ್ಲ, ಏನು ಮಾಡಲಿ ಈಗ? ಪೊಲೀಸ್ ಸ್ಟೇಷನ್ ಹೋಗಿ ಕೊಡಲೇನು, ಛೆ! ಬೇಡ ಅವರು ಈ ಹಣವನ್ನು ತಿಂದು ಬಿಡಬಹುದು, ಇಲ್ಲ ಇಲ್ಲ, ಎಲ್ಲಾ ಪೊಲೀಸರು ಹಾಗೆ ಇರುವುದಿಲ್ಲ, ಒಳ್ಳೆ ಆಫೀಸರ್ ಸಹ ಇದ್ದಾರೆ, ರಾಜಪ್ಪರ ಕಣ್ಣ ಮುಂದೆ ಪುನಃ ಮನೆಯ ದೃಶ್ಯ ಓಡಲಾರಂಭಿಸಿತು, ಪುನಃ ಯೋಚನೆ ಬದಲಾಯಿತು, ಹೇಗೋ ಹಣ ಬಂದಿದೆ ಇದರಿಂದ ಕಾಮತರ ಎಲ್ಲಾ ಸಾಲ ಕೊಟ್ಟು ಉಳಿದ ಹಣದಿಂದ ಆದಾಯಗೋಸ್ಕರ ಯಾವುದೇ ಚಿಕ್ಕಪುಟ್ಟ ವ್ಯಾಪಾರ ಮಾಡಬಹುದು, ರಾಜಪ್ಪ ಗೊಂದಲದಲ್ಲಿ ಬಿದ್ದರು, ಹೌದು, ಎಲ್ಲ ಕಷ್ಟ ದೂರವಾಗುತ್ತದೆ ಎಂದು ದೀರ್ಘವಾಗಿ ಯೋಚಿಸಿ ಅವರು ಕಾಮತರ ಅಂಗಡಿಯತ್ತ ಹೆಜ್ಜೆ ಇಟ್ಟರು. ಆದರೆ ಈ ತನಕ ಯಾವುದೇ ದುಷ್ಕಾರ್ಯ ಮಾಡದ ರಾಜಪ್ಪನವರ ಮನಸ್ಸು ಇದಕ್ಕೆ ಒಪ್ಪಲಿಲ್ಲ, ಅವರ ಹೆಜ್ಜೆ ತಂತಾನೆ ಪೊಲೀಸ್ ಸ್ಟೇಷನ್ ಕಡೆಗೆ ಸಾಗಿತು.

ಪೊಲೀಸ್ ಸ್ಟೇಷನ್ ನಲ್ಲಿ ಡ್ಯೂಟಿಯಲ್ಲಿ ಇನ್ಸ್ಪೆಕ್ಟರ್ ರಾವ್ ಇದ್ದರು, ರಾಜಪ್ಪ ಅವರ ಹತ್ತಿರ ಎಲ್ಲ ವಿಷಯ ತಿಳಿಸಿ ಆ ಪರ್ಸನ್ನು ಅವರಿಗೆ ಒಪ್ಪಿಸಿದರು, ಇನ್ಸ್ಪೆಕ್ಟರ್ ರಾವ್ ರಾಜಪ್ಪನವರನ್ನು ಆಶ್ಚರ್ಯದಿಂದ ನೋಡುತ್ತಾ ಅವರ ಎಲ್ಲ ವಿವರ ಬರೆದು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು, ಬಹುಶ ಈ ಕಾಲದಲ್ಲೂ ಇಂತಹ ಮನುಷ್ಯರಿರುತ್ತಾರಾ ಎಂದು ಯೋಚಿಸುತ್ತಿರಬೇಕು.

ಎಲ್ಲಾ ಪ್ರಕ್ರಿಯೆ ಮುಗಿದ ನಂತರ ರಾಜಪ್ಪ ಪೊಲೀಸ್ ಸ್ಟೇಷನ್ ನಿಂದ ಹೊರಗೆ ಬಂದರು. 

ಸ್ವಲ್ಪ ಹೊತ್ತು ಪುನಃ ಸರ್ಕಲ್ಲಿನ ಆ ಬೆಂಚಿನಲ್ಲಿ ಕುಳಿತು ಯೋಚಿಸುತ ಅವರು ನೇರ ಕಾಮತರ ಅಂಗಡಿಗೆ ಹೋದರು. 

ಹಿಂಜರಿಯುತ್ತಲೇ ರಾಜಪ್ಪ ಕಾಮತರಿಗೆ ಮನೆಗೆ ಸ್ವಲ್ಪ ಸಾಮಾನು ಬೇಕೆಂದು ಕೇಳಿದರು, ಕಾಮತರು ಕನ್ನಡಕ ಕೆಳಗೆ ಮಾಡಿ ಅವರನ್ನು ನೋಡುತ್ತಾ " ರಾಯರೇ ಮೊದಲೇ ಇಪ್ಪತ್ತೆರಡು ಸಾವಿರ ಬಾಕಿಯಿದೆ"

ರಾಜಪ್ಪ" ಈ  ಒಂದು ಸಲ ಕೊಡಿ, ಮುಂದಿನ ವಾರ ಹಣದ ವ್ಯವಸ್ಥೆ ಮಾಡಿ ಎಲ್ಲ ಹಣ ಕೊಟ್ಟು ಬಿಡುತ್ತೇನೆ ಕಾಮತರೇ".

ಹಳೆ ವ್ಯಾವರಿಕ ಸಂಬಂಧ ಹಾಗು ರಾಜಪ್ಪನ ಮನೆಯ ಎಲ್ಲ ವಿಷಯ ತಿಳಿದ ಕಾಮತರು ತನ್ನ ಹುಡುಗನನ್ನು ಕರೆದು "ಮಂಜು, ರಾಯರ ಸಾಮಾನು ಬರೆದು ಎಲ್ಲ ಸಾಮಾನು ಅವರ ಮನೆಗೆ ಕೊಟ್ಟು ಬಾ" ಹಾಗು ಕಾಮತರು ರಾಜಪ್ಪನವರಿಗೆ "ರಾಯರೇ ಅಲ್ಲಿ ಹೋಗಿ ಲಿಸ್ಟ್ ಬರೆಸಿ, ಸ್ವಲ್ಪ ಹೊತ್ತಿನಲ್ಲಿ ನಿಮ್ಮ ಸಾಮಾನು ಮನೆಗೆ ತಲುಪಿಸುತ್ತೇನೆ".

ನಿಟ್ಟುಸಿರು ಬಿಡುತ್ತಾ ರಾಜಪ್ಪನವರು ಕಾಮತರಿಗೆ ಧನ್ಯವಾದ ಸಲ್ಲಿಸಿ ಹಾಗು ಸಾಮಾನು ಬರೆಸಿ ಮನೆಗೆ ಹೋಗಲು ಬಸ್ ಸ್ಥಾನದತ್ತ ಹೆಜ್ಜೆ ಇಟ್ಟರು.

ರಾಜಪ್ಪನವರು ಮನೆಗೆ ತಲುಪಿದಾಗ ಮನೆಯಲ್ಲಿ ಒಬ್ಬ ಯುವಕ ಕುಳಿತಿದ್ದ, ರಾಜಪ್ಪನವರು ಅವನನ್ನು ಆಶ್ಚರ್ಯದಿಂದ ನೋಡುತ್ತಿದ್ದಾಗ, ಅವರ ಸೊಸೆ "ಅಪ್ಪ, ಇವರು ಮುಂಬೈಯಿಂದ ಬಂದಿದ್ದಾರೆ, ಏನೋ ಇನ್ಶೂರೆನ್ಸ್ ಬಗ್ಗೆ ಹೇಳುತ್ತಿದ್ದಾರೆ". 

ಆಗ ಆ ಯುವಕ "ನಮಸ್ಕಾರ ಸರ್, ನನ್ನ ಹೆಸರು ವಿಶ್ವಾಸ, ಮುಂಬೈಯಿಂದ ಬಂದಿದ್ದೇನೆ, ನಾನೊಬ್ಬ ಇನ್ಶೂರೆನ್ಸ್ ಏಜೆಂಟ್, ಕಳೆದ ವಾರ ನಿಮ್ಮ ಮಗ ಸುದೀಪನ ಕಂಪನಿಗೆ ಹೋಗಿದ್ದೆ, ಆಗ ಅವನ ವಿಷಯ ಕೇಳಿ ತುಂಬಾ ಬೇಜಾರಾಯಿತು, ನಾವು ಒಳ್ಳೆ ಸ್ನೇಹಿತರಾಗಿದ್ದೆವು, ಅವನ ವಿಷಯ ಕೇಳಿ ನನಗೆ ತುಂಬಾ ಆಘಾತವಾಯಿತು. ಸರ್ ಮುಂಬೈಯಲ್ಲಿದ್ದಾಗ ಸುದೀಪ ನನ್ನ ಒತ್ತಾಯದ ಮೇರೆಗೆ ನನ್ನಿಂದ ಎರಡು ಇನ್ಶೂರೆನ್ಸ್ ಪಾಲಿಸಿ ಮಾಡಿಸಿದ್ದ ಹಾಗು ನಾಮಿನಿ ಆಗಿ ಒಂದರಲ್ಲಿ ಅವನ ತಾಯಿಯ ಹಾಗು ಇನ್ನೊಂದರಲ್ಲಿ ಅವನ ಪತ್ನಿಯ ಹೆಸರು ಬರೆಸಿದ್ದ, ಸರ್ ನಿಮಗೆ ಈ ಇನ್ಶೂರೆನ್ಸ್ ನ ವಿಷಯ ಗೊತ್ತಿರಲಿಕ್ಕೆ ಇಲ್ಲ ಹಾಗು ನಿಮಗೆ ತಿಳಿಸುವುದು ನನ್ನ ಕರ್ತವ್ಯ ಎಂದು ಭಾವಿಸಿ ನಾನು ಕೂಡಲೇ ಇಲ್ಲಿಗೆ ಬಂದೆ, ಸರ್ ಐದು ಐದು ಲಕ್ಷದ ಎರಡು ಪಾಲಿಸಿ ಮಾಡಿಸಿದ್ದ ಅವನು, ಅದರ ಕ್ಲೇಮ್ ಪೇಪರ್ ತಂದಿದ್ದೇನೆ, ಈ ಕ್ಲೇಮ್ ಪೇಪರಲ್ಲಿ ಬರೆಯಲು ಅಮ್ಮನ ಹಾಗು ಅವನ ಪತ್ನಿಯ ಬ್ಯಾಂಕ್ ಡೀಟೇಲ್ಸ್ ಬೇಕು ಹಾಗು ಅವರ ಸಹಿ ಬೇಕು, ಒಂದು ೧೫ ದಿವಸದಲ್ಲಿ ಅವರ ಅಕೌಂಟಿಗೆ ಐದು ಐದು ಲಕ್ಷ ಅಮೌಂಟ್ ಟ್ರಾನ್ಸ್ಫರ್ ಆಗುತ್ತದೆ" ಎಂದು ಹೇಳಿ ರಾಜಪ್ಪನವರಿಗೆ ಕ್ಲೇಮ್ ಪೇಪರ್ ಕೊಟ್ಟ.

ರಾಜಪ್ಪನವರು ಅವನ ಮಾತು ಕೇಳಿ ಆಶ್ಚರ್ಯ ಹರುಷದಿಂದ ಅವನನ್ನು ತಬ್ಬಿಕೊಂಡರು "ಮಗ ನಿನಗೆ ತಿಳಿದಿಲ್ಲ ನೀನಿಂದು ದೇವಧೂತನಾಗಿ ನಮ್ಮ ಈ ಮನೆಗೆ ಬಂದಿದೆಯೆಂದು, ಹೇಗೆ ನಿನಗೆ ಹೇಳಲಿ, ನಮ್ಮಲ್ಲಿ ಬಂದಿದ ನಿನಗೆ ಒಂದು ಚಹಾ ಮಾಡಿ ಕುಡಿಸಲೆಂದರೆ ಮನೆಯಲ್ಲಿ ಈಗ ಸಾಮಾನು ಇಲ್ಲ, ಹೇಳಲು ಬೇಸರವಾಗುತ್ತಿದೆ, ನಮ್ಮನ್ನು ಕ್ಷಮಿಸು ಮಗ".

ಅದಕ್ಕೆ ವಿಶ್ವಾಸ "ಅದರ ಏನು ಅಗತ್ಯವಿಲ್ಲ ಅಂಕಲ್, ಅದೆಲ್ಲ ಬಿಡಿ, ಒಂದು ವಿಷಯ ಹೇಳಲು ಮರೆತೆ, ನಾನು ಅವನಿಂದ ಅಡ್ವಾನ್ಸ್ ಆಗಿ ಇಪ್ಪತ್ತು ಸಾವಿರ ರೂಪಾಯಿ ಕಂತು ತುಂಬಿಸಲು ತೆಗೆದುಕೊಂಡಿದ್ದೆ, ಆದರೆ ಡ್ಯುಡೇಟ್ ಬರುವ ಮುಂಚೆನೇ ಈ ದುರಂತ ನಡೆದು ಹೋಯಿತು, ಇನ್ನು ಆ ಕಂತು ತುಂಬಿಸುವ ಅಗತ್ಯವಿಲ್ಲ" ಎಂದು ತನ್ನ ಬ್ಯಾಗಿನಿಂದ ಇಪ್ಪತ್ತು ಸಾವಿರ ತೆಗೆದು ರಾಜಪ್ಪನ ಕೈಯಲ್ಲಿಟ್ಟ"

ರಾಜಪ್ಪನವರು "ಮಗ, ನಿನಗೆ ಹೇಗೆ ಧನ್ಯವಾದ ಸಲ್ಲಿಸಲಿಯೆಂದು ಅರ್ಥವಾಗುತ್ತಿಲ್ಲ".

"ಅದೇನು ಬೇಡ ಅಂಕಲ್, ನಾನೂ ನಿಮ್ಮ ಮಗನ ಹಾಗೆಯೇ" ಎಂದು ಹೇಳಿ ರಾಜಪ್ಪನವರಿಂದ ಭಾಗ್ಯಮ್ಮ ಮತ್ತು ಸುಮಳ ಬ್ಯಾಂಕ್ ಡೀಟೇಲ್ಸ್ ಬರೆಸಿ, ಸಹಿ ಮಾಡಿಸಿ, ಅವರ ಆಶೀರ್ವಾದ ಪಡೆದು ವಿಶ್ವಾಸ ಮನೆಯಿಂದ ತೆರಳಿದ.

ರಾಜಪ್ಪ, ಭಾಗ್ಯಮ್ಮ ಹಾಗು ಸುಮಳ ಕಣ್ಣಿಂದ ಕಣ್ಣೀರು ಹರಿಯುತ್ತಿತ್ತು.

ರಾಜಪ್ಪ ಮನೆಯಲ್ಲಿದ್ದ ಮಂದಹಾಸ ಬೀರುತ್ತಿರುವ ಸಾಯಿಬಾಬಾನ ಫೋಟೋದ ಹತ್ತಿರ ಹೋಗಿ ಅಡ್ಡ ಬಿದ್ದರು.

by ಹರೀಶ್ ಶೆಟ್ಟಿ, ಶಿರ್ವ


1 comment:

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...