Wednesday, June 25, 2014

ಹಿಜಡಾ-೬

ಹಿಜಡಾ-೬
-----------

ಜೋನಮ್ಮ ಮತ್ತು ಬಾನಮ್ಮ ಹೋದ ನಂತರ ರಜನಿ ತುಸು ಗಳಿಗೆ ಅವರು ಕೊಟ್ಟ ಪತ್ರ ಕೈಯಲ್ಲಿ ಹಿಡಿದು ಕಕ್ಕಾಬಿಕ್ಕಿ ಅವಸ್ಥೆಯಲ್ಲಿ ಹಾಗೆಯೇ ನಿಂತಿದ್ದಳು.

ಸ್ವಲ್ಪ ಕ್ಷಣದ ನಂತರ ಅವಳು ಕಂಪಿತ ಕೈಯಿಂದ ಜೋನಮ್ಮ ಕೊಟ್ಟು ಹೋದ ಸಂಗಮ್ಮ ಬರೆದ ಪತ್ರ ತೆರೆದು ಓದಲಾರಂಭಿಸಿದಳು.

ಪ್ರೀತಿಯ ಮಗಳೇ,

ನಾನು ಸಂಗಮ್ಮ, ಮೋಹನನನ್ನು ಸಾಕಿ ಬೆಳೆಸಿದ ದುರ್ದೈವಿ, ನಾನು ಹಿಜಡಾ ಸಮುದಾಯಕ್ಕೆ ಸೇರಿದವಳು, ಹುಟ್ಟಿದ ನಂತರ ಕೆಲವೇ ವರ್ಷದ ನಂತರ ಮನೆ, ಸಮಾಜದಿಂದ ತ್ಯಜಿಸಲಾದವಳು, ಸಂಬಂಧಿಕರಿಂದ ದೂರವಾದ ನನಗೆ ಈ ಹಿಜಡಾ ಸಮುದಾಯದ ಜತೆಗಾರರಲ್ಲದೆ ಬೇರೆ ಯಾರೂ ನನ್ನವರೆಂದು ಇರಲಿಲ್ಲ, ಹೇಗೋ ಪಡೆದ ಜೀವನವನ್ನು ದೇವರ ಇಚ್ಚೆಯೆಂದು ತಿಳಿದು ಸಾಗಿಸುತ್ತಿದ್ದೆ, ಆದರೆ ೨೫ ವರ್ಷದ ಹಿಂದೆ ಒಂದು ಕಸದ ಬುಟ್ಟಿಯಲ್ಲಿ ಸಿಕ್ಕಿದ ಮಗುವಿನಿಂದ ನನ್ನ ಜೀವನ ಬದಲಾಯಿತು, ನಾನು ನನ್ನ ಜೀವನದ ಸರ್ವಸ್ವವನ್ನು ಆ ಮಗುಗೋಸ್ಕರ ನೀಡಿದೆ, ನಿನ್ನನ್ನು ಪ್ರೇಮಿಸುವ ಆ ಹುಡುಗ ಮೋಹನನೇ ಆ ಮಗು, ಮೋಹನ ತಿಳಿಸಿದ ಪ್ರಕಾರ ನೀನು ಅವನ ಜೊತೆ ಮದುವೆಯಾಗಲು ಕೇವಲ ಒಂದೇ ಸ್ಥಿತಿಯಲ್ಲಿ ನಿನ್ನ ಒಪ್ಪಿಗೆ ನೀಡಿದೆ ಎಂದು, ನಿಮ್ಮ ಮದುವೆಗೆ ನಾವು ಬರಬಾರದೆಂದು ಹಾಗು ಮದುವೆ ಆದ ನಂತರ ಎಂದೂ ಅವನು ನಮ್ಮನ್ನು ಭೇಟಿ ಮಾಡಬಾರದೆಂದು, ನಮ್ಮಿಂದ ದೂರ ಇರಬೇಕೆಂದು, ಆಯಿತು ಮಗಳೇ, ಈ ತಾಯಿಗೆ ಒಪ್ಪಿಗೆ ನಿನ್ನ ಈ ಮಾತು, ನೀನು ಹೇಳಿದ ಪ್ರಕಾರವೇ ಆಗಲಿ, ನಾವು ಎಂದೂ ಮೋಹನನ ನಿಕಟ ಬರಲಾರೆವು, ಅವನಿಂದ ದೂರ ದೂರ ಇರುವೆವು, ಇದು ಕಷ್ಟ ಎಂದು ನನಗೆ ಗೊತ್ತು, ಹೇಗೋ ಮೊನ್ನೆ ಮೋಹನ ಈ ಬಗ್ಗೆ ತಿಳಿಸಿದ ನಂತರ ನಾನು ಹುಷಾರಿಲ್ಲದೆ ಆಸ್ಪತ್ರೆ ಸೇರಿದ್ದೇನೆ, ಡಾಕ್ಟರನವರು ಸಹ ನಾನಿನ್ನು ಹೆಚ್ಚು ಸಮಯ ಬದುಕಲಾರೆಯೆಂದು ಉತ್ತರ ನೀಡಿ ಆಗಿದೆ, ಇಂದು ನನ್ನ ಹಾಗು ಮೋಹನನನ್ನು ಸಾಕಿದ ನನ್ನ ಎಲ್ಲ ಜೊತೆಗಾರರ ಹೃದಯ ರೋಧಿಸುತ್ತಿದೆ, ಆದರೆ ನನ್ನ ಮೋಹನ ಹಾಗು ನೀನು ಸುಖದಿಂದ ಇರಬೇಕೆಂದು ನಮ್ಮ ಬಯಕೆ.

ನಾನು ಮದುವೆಗೆ ನೀನಿಟ್ಟ ಈ ಷರತ್ತು ತಪ್ಪೆಂದು ಹೇಳಲಾರೆ, ನಾವು ಮೋಹನನ ಯಾರೇ ಆದರೂ ಕೊನೆಗೆ ನಾವು ಹಿಜಡಾನವರು, ನಿನ್ನ ಪರಿವಾರದವರಿಗೆ ಹಾಗು ನೀನು ಕಷ್ಟ ಪಟ್ಟು ಸಂಪಾದಿಸಿದ ನಿನ್ನ ಈ ಅಂತಸ್ತಿಗೆ ಇದು ದೊಡ್ಡ ಧಕ್ಕೆ ಉಂಟಾಗುವುದೆಂದು ಅರಿವಿದೆ ನನಗೆ, ನಮಗೆ ನಿನ್ನ ಎಲ್ಲಾ ಷರತ್ತು ಒಪ್ಪಿಗೆ ಇದೆ ಮಗಳೇ, ಆದರೆ ಈ ದುರ್ದೈವಿ ತಾಯಿಯ ಕೇವಲ ಒಂದೇ ಒಂದು ವಿನಂತಿ, ನಾನು ಕಳಿಸಿದ ಈ ಚಿನ್ನದ ಒಡವೆಗಳನ್ನೆಲ್ಲಾ ನೀನು ಸ್ವೀಕರಿಸಬೇಕೆಂದು, ನೀನು ಇದನ್ನು ಸ್ವೀಕರಿಸಿದರೆ ನನಗೆ ಅಷ್ಟೇ ತೃಪ್ತಿ ಸಾಕು. ಈ ಸಾಯುವ ತಾಯಿಯ ಮೇಲೆ ಇಷ್ಟೊಂದು ಉಪಕಾರ ಮಾಡು, ದಯಮಾಡಿ ಈ ಎಲ್ಲ ಒಡವೆಗಳನ್ನು ಸ್ವೀಕರಿಸು, ಒಟ್ಟಿಗೆ ಮೋಹನನ ಹೆಸರಲ್ಲಿ ಜಮಾ ಮಾಡಿದ ಬ್ಯಾಂಕಿನ ಪಾಸು ಬುಕ್ ಸಹ ಕಳಿಸುತ್ತಿದ್ದೇನೆ, ನೀವಿಬ್ಬರು ಸುಖದಿಂದ ಜೀವನ ಸಾಗಿಸಿ, ಆರಾಮದಿಂದಿರಿ, ಇಷ್ಟೇ ಬಯಸುವೆ, ನನ್ನ ಆಶಿರ್ವಾದ ನಿಮಗೆ.

ದುರ್ದೈವಿ,

ಸಂಗಮ್ಮ

ಪತ್ರ ಓದಿದ ನಂತರ ರಜನಿಯ ಕಣ್ಣಿಂದ ಧಾರಾಳವಾಗಿ ಕಣ್ಣೀರು ಹರಿಯಲಾರಂಭಿಸಿತು. ಅವಳು ದಿಗ್ಭ್ರಾಂತ  ಅವಸ್ಥೆಯಲ್ಲಿ ಅಲ್ಲಿದ್ದ ಕುರ್ಚಿಯಲ್ಲಿ ಕುಸಿದು ಬಿದ್ದಳು.

(ಮುಂದುವರಿಯುವುದು)


by ಹರೀಶ್ ಶೆಟ್ಟಿ, ಶಿರ್ವ

2 comments:

  1. ಪತ್ರ ಓದುತ್ತ ಹೋದಂತೆ ರಜನೀಕಾಂತ್ ಒತ್ತೊಟ್ಟಗಿರಲಿ ಕತೆಗಾರ ಮಹಾಶಯ, ನಾನೇ ಕಣ್ಣೀರಾದೆ... :(

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...